“ನೆಚ್ಚಿನ ನಾಯಕರಿಗೆ ಮೆಚ್ಚಿದ ಪತ್ರ – ಕಾರ್ಯಕರ್ತನಿಂದ” – ಗುರುರಾಜ್ ಗಂಟಿಹೊಳೆ

ಮೈಸೂರು: ಬೈಂದೂರು ಬಿಜೆಪಿ ಶಾಸಕ ಗುರುರಾಜ್ ಗಂಟಿಹೊಳೆ ತಮ್ಮ ಮೈಸೂರು ಚಲೋ ಯಾತ್ರೆಯ ಅನುಭವನ್ನು “ನೆಚ್ಚಿನ ನಾಯಕರಿಗೆ ಮೆಚ್ಚಿದ ಪತ್ರ – ಕಾರ್ಯಕರ್ತನಿಂದ” ಎನ್ನುವ ಶೀರ್ಷಿಕೆಯ ಮುಖಾಂತರ ಪತ್ರವನ್ನು ಬರೆದು ಹಂಚಿಕೊಂಡಿದ್ದಾರೆ.

ಶಾಸಕ ಗುರುರಾಜ್ ಗಂಟಿಹೊಳೆ ಸರಳತೆಗೆ ಹೆಸರಾಗಿರುವ ಉಡುಪಿ ಜಿಲ್ಲೆಯ ಶಾಸಕ. ಪಕ್ಷದ ನಾಯಕರು-ಸೇನಾನಿಗಳ ಜೊತೆ ಗಂಟಿಹೊಳೆ ಮೈಸೂರು ಚಲೋ ಪಾದಯಾತ್ರೆಯಲ್ಲಿ ಉದ್ಘಾಟನಾ ಸಮಾರಂಭದಿಂದ ಪ್ರಾರಂಭಿಸಿ ಸಮಾರೋಪ ಸಮಾರಂಭದ ವರೆಗೂ ನಿರಂತರ ಒಂದು ದಿನವೂ ತಪ್ಪದೇ ಭಾಗಿಯಾಗಿದ್ದರು. ಎಂದಿನಂತೆ ಬರಿಗಾಲಲ್ಲಿ ಸಂಚರಿಸುವ ಬೈಂದೂರು ಶಾಸಕರು ಮೈಸೂರ್ ಚಲೋ ಪಾದಯಾತ್ರೆಯಲ್ಲೂ ಕೂಡ ಚಪ್ಪಲಿ ಧರಿಸದೆಯೇ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆಯುದ್ದಕ್ಕೂ ಬರಿಗಾಲಲ್ಲೇ ತೆರಳಿದ್ದು ವಿಶೇಷ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಮೂಡ ಹಗರಣ ಮತ್ತು ವಾಲ್ಮೀಕಿ ಹಗರಣ ಖಂಡಿಸಿ ಮೈಸೂರ್ ಚಲೋ ಪಾದಯಾತ್ರೆ ನಡೆಯಿತು. ಈ ಯಾತ್ರೆಯಲ್ಲಿ ರಾಜ್ಯ ಬಿಜೆಪಿ ನಾಯಕರು, ಸಂಸದರು, ಶಾಸಕರು ಹೀಗೆ ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿ ಪಾದಯಾತ್ರೆ ಯಶಸ್ವಿಗೊಳಿಸಿದರು. ಪ್ರತೀ ದಿನ ಪಾದಯಾತ್ರೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆಗೆ ರಾಜ್ಯದ ಗಮನ ಸೆಳೆದಿದ್ದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ.

ಗುರುರಾಜ್ ಗಂಟಿಹೊಳೆಯವರು ಸಿಂಪಲ್ ಶಾಸಕ ಎಂದೇ ಗುರುತಾದವರು. ಮೈಸೂರು ಪಾದಯಾತ್ರೆಯಲ್ಲೂ ಇವರ ನಡೆ ಬಿಜೆಪಿ ಕಾರ್ಯಕರ್ತರ ನಡುವೆ ಗಮನಸೆಳೆಯಿತು. ಈ ಬಾರಿಯ ಮೈಸೂರು ಚಲೋ ಪಾದಯಾತ್ರೆಯಲ್ಲಿ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದರು.